ಸಂಧ್ಯಾರಾಗ
ಮಳೆ ಮಿಂದೆದ್ದ ಕಾಂಕ್ರೀಟು ಅಂಗಳ ಇನ್ನೂ ಒದ್ದೆಯಿತ್ತು. ಕತ್ತಲು ಆಗಿಲ್ಲವಾದರೂ ಇರುಳ ಛಾಯೆ, ಮಳೆಗಾಲದಲ್ಲಿ ಬೇಗನೆ ಕಾಡುತ್ತಿತ್ತು. ಬೆಳಗ್ಗೆ ತಂದಿದ್ದ ಹಾಲಿನಲ್ಲಿ ಒಂಚೂರು ಮಿಕ್ಕಿದೆ. ಅದನ್ನು ಕಾಸಿ ಕಾಫಿ ಮಾಡಿ, ಮಗಳು ತಂದಿದ್ದ ಉಂಡೆ ಚಕ್ಕುಲಿಯೊಟ್ಟಿಗೆ ಕುಡಿದರೆ ರಾತ್ರಿಯ ತನಕ ಹೊಟ್ಟೆ ಸದ್ದು ಮಾಡುವುದಿಲ್ಲ. ಕಮಲಮ್ಮ ಚಪಾತಿ ಮಾಡಿಟ್ಟು ಹಾಟ್ ಬಾಕ್ಸ್ ನಲ್ಲಿಟ್ಟು ಹೋಗಿದ್ದಾಳೆ, ರಾತ್ರಿ ಪಲ್ಯ ಬಿಸಿ ಮಾಡಿ ತಿಂದರೆ ಆಯ್ತು. ಅಷ್ಟೇ. ಸಮಯ ಕಳೆಯಬೇಕಲ್ಲ,
ಅಚ್ಯುತ ರಾಯರು ಬಿಸಿ ಕಾಫಿ ಲೋಟ ಹಿಡಿದುಕೊಂಡು ಅಂಗಳಕ್ಕೆ ಕಾಲಿಟ್ಟರು. ಆರು ಗಂಟೆಗೆ ಆಫಿಸು ಬಸ್ ಒಂದು ಬಂತು. ಆಚೆ ಮನೆಯ ಪ್ರಸಾದ ಅದರಲ್ಲಿ ಇಳಿತಾ ಇದ್ದಾನೆ. ಕೈ ಬೀಸಿ ಮನೆಗೋಡುತ್ತಾನೆ. ದಿನ ನಿತ್ಯದ ರೂಢಿ ಇದು.
ರಾಯರು ಮಳೆಯ ನೀರಲ್ಲಿ ಸುಂದರವಾಗಿ ಕಾಣುತಿದ್ದ ಮುತ್ತು ಮಲ್ಲಿಗೆ, ದಾಸವಾಳ ಹೂವುಗಳ ನ್ನು ಮೆಲ್ಲನೆ ಸವರಿದರು.
ಸಂಧ್ಯಾ ಸಮಯದಲ್ಲಿ ಬೀಸುವ ಹಿತವಾದ ಗಾಳಿ ದೇವಸ್ಥಾನದ ಗಂಟೆಗಳ ನಾದ ಮನಕ್ಕೆ ಮುದ ನೀಡಿತು. ಶ್ರೀಮತಿ ಇರುತ್ತಿದ್ದರೆ ಕಾಫಿ ಇನ್ನೂ ರುಚಿ ಇರುತ್ತಿತ್ತಲ್ಲ!
ಹೂವಿನಂದ ನೋಡುವ ಬದಲು ಅವಳ ಅಂದವೆ ನೋಡುತ್ತಿದ್ದೆ, ಅವಳ ನೆನಪಾಗಿ ರಾಯರು ನಿಟ್ಟುಸಿರು ಬಿಟ್ಟರು. ಎಂಟು ತಿಂಗಳಾಯಿತು ಅವಳಿಲ್ಲದೆ. ಒಂದು ಗಳಿಗೆಯಲ್ಲ, ಎಂಟು ತಿಂಗಳು!
ಎಲ್ಲವೂ ಸರಿಯಾಗಿತ್ತು. ಬಾತ್ ರೂಮ್ ನಲ್ಲಿ ಜಾರಿ ಬಿದ್ದ ನೆವ ಅಷ್ಟೇ, ಆಮೇಲೆ ಹತ್ತು ದಿನ äೕವನ್ಮರಣ ಹೋರಾಟ , ಹೋಗಿಯೇ ಬಿಟ್ಟಿದ್ದಳು ಶ್ರೀಮತಿ. ಅವಳ ಹೆಸರೇ ಶ್ರೀಮತಿ, ಮದುವೆ ಗೆ ಮುನ್ನವೇ ಅವಳು ಶ್ರೀಮತಿ. ಇದೇ ಹೇಳಿ ಅವಳನ್ನು ಆಗ್ಗಾಗ್ಗೆ ರೆಗಿಸುತ್ತಿದ್ದ ನೆನಪಾಯ್ತು ರಾಯರಿಗೆ. ಶ್ರೀಮತಿ ಯು ಶ್ರೀಮತಿಯಾಗಿಯೆ ಹೋಗಿದ್ದಳು. ಮೇಷ್ಟ್ರು ಕೆಲಸದಿಂದ ನಿವೃತ್ತಿ ಅದ ಮೇಲೆ äೕವನ ಸಾಧಾರಣವಾಗಿ ಸಾಗಿತ್ತು. ಇದ್ದೊಬ್ಬ ಮಗಳ ಮದುವೆ ಆಗಿತ್ತು, ಬೆಂಗಳೂರಲ್ಲೇ ಅವಳೂ ಇದ್ದದ್ದು. ಆದರೆ ಅವಳು ಇದ್ದದ್ದು ಒಂದು ಮೂಲೆ
ಇವರು ಇನ್ನೊಂದು ಮೂಲೆ. ಆದರೂ ಆಗಾಗ ಬಂದು ಹೋಗುವಳು ಮೇಘ . ಸಿಹಿ ಕಡುಬು, ಹುರುಳಿ ಸಾರು, ಅವರೆಕಾಳು ಉಪ್ಪಿಟ್ಟು ಎಲ್ಲ ಮಾಡಿ ಕೊಡುವಳು. ಅಮ್ಮನ ಕೈ ಚಳಕ ಅವಳಿಗೂ ಬಂದಿತ್ತು.
ಬೆಲ್ಲದ ಸವಿ!
ಶ್ರೀಮತಿ ಯ ನೆನಪು ಕಾಡುವ ದಿನಗಳಲ್ಲಿ ರಾಯರಿಗೆ ಬೇರೇನೂ ಬೇಕಿರಲಿಲ್ಲ. ಅವಳ ಅಡಿಗೆ ಮನೆ, ಅವಳು ಉಡುತ್ತ ಇದ್ದ ಆ ಹಳದಿ ಹೂಗಳ ಸೀರೆ, ಅವಳು ಬಿಟ್ಟು ಹೋದ ಬಳೆಗಳು, ಅವಳಿಗೆ ತಾನು ಕಟ್ಟಿದ ಮಾಂಗಲ್ಯ, ಕುಂಕುಮದ ಡಬ್ಬಿ, ಎಲ್ಲವೂ ಹಾಗೆಯೇ ಇದೆ.
ಅವಳೇ ಇದ್ದಾಳೆ ಎನ್ನುವಷ್ಟು ಅವಳ ಕಂಪು ಅಲ್ಲಿ ಗಾಢವಾಗಿ ತಳವೂರಿತ್ತು.
ಕಿಟಕಿ ಬಾಗಿಲು ತೆಗಿಯುವುದು, ದೀಪ ಹಚ್ಚಿ ಮಂತ್ರ ಓದುವುದು ತನ್ನ ಕೆಲಸ ಈಗ.
ಅವಳ ಪಟ ಕ್ಕೆ ದಿನಾ ಹೂವಿಟ್ಟು ಕುಂಕುಮ ಹಚ್ಚಿ ಐದು ನಿಮಿಷ ಆದರೂ ಕಣ್ಣು ಪಿಳಿ ಪಿಳಿ ಮಾಡಿ ನೊಡದಿದ್ರೆ ರಾಯರಿಗೆ ದಿನ ಸರಿಯಾಗುವುದಿಲ್ಲ. ಮುತ್ತೈದೆ ಭಾಗ್ಯವಾದರೂ ಅವಳಿಗೆ ಒದಗಿತಲ್ಲ ಎಂಬ ಸಮಧಾನ ಅವರಿಗೆ.
" ಅಪ್ಪ ಅಡುಗೆ ಕಲಿ" ಮಗಳು ಅಪ್ಪನಿಗೆ ಸವಿ ಸಲಹೆ ನೀಡಿದ್ದಳು. ಹಾ! ಈ ವಯಸ್ಸಲ್ಲಿ ?! ರಾಯರು ಒಂದೆರಡು ದಿನ " ಟ್ರೈ" ಏನೋ ಮಾಡಿದ್ದರು. ಪಲ್ಯ ಸಾಂಬಾರ್ ಆಯ್ತು, ಉಪ್ಪಿಟ್ಟು ಪಾಯಸ ಆಯ್ತು.. ಈ ಉಸಾಬರಿಗೆ ತಾನು ಹೋಗುವುದಿಲ್ಲ ಎಂದು ಅಡುಗೆ ಕಮಲಮ್ಮ ನಿಗೇ ಎಲ್ಲ ಬಿಟ್ಟು ಕೊಟ್ಟಿದ್ದರು. ಎರಡು ಮಹಡಿ ಮನೆ ಖಾಲಿ ಅನಿಸಿದ್ದು ಶ್ರೀಮತಿ ಹೋದ ಬಳಿಕ. ಈಗ ಅವಳ ಸ್ಟೀಲ್ ಪಾತ್ರೆಗಳು ಅಲ್ಲಿ ಬಿದ್ದಿವೆ .
" ಬಾಡಿಗೆಗೆ ಕೊಡ್ಬೋದಲ್ವ ? ಹೇಗೂ ನೀನಂತು ಯೂಸ್ ಮಾಡ್ತಾ ಇಲ್ಲ ಆ ರೂಮು?" ಲಾಫಿಂಗ್ ಕ್ಲಬ್ ಗೆ ಬರ್ತಾ ಇದ್ದ ಗೆಳೆಯ ಶಿವರಾಮು ಹೇಳಿದ್ದ . ಆದರೆ ರಾಯರಿಗೆ ಒಂಟಿ ಆಗಿರಬೇಕು ಅನಿಸಿತ್ತು.
" ನನ್ನ ಹತ್ರ ಪಾರ್ಟಿ ಇದೆ. ಯಾವಾಗ ಬೇಕೋ ಹೇಳು " ಎಂದು ಶಿವರಾಮು ಹೇಳಿದ್ದ. ರಾಯರು ಒಪ್ಪಿದ್ದರು. ಆ ಫ್ಯಾಮಿಲಿ ಬಂದು ನೋಡಿ ಹೋಗಿ ಮನೆ ಒಪ್ಪಿಗೆ ಎಂದು ಹೇಳಿದಾಗ ರಾಯರು ಹಠಾತ್ ಮನಸ್ಸು ಬದಲಾಯಿಸಿ, ಇಲ್ಲ ಮನೆ ಬಾಡಿಗೆಗೆ ಕೊಡಲು ಮನಸ್ಸಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದರು.
ಆಹಾ! ರಾತ್ರಿ ಹಗಲು ಆಗುವುದರ ಒಳಗೆ ಇವನಿಗೆನು ಮರುಳು ಬಂತಾ ಎಂದು ಶಿವರಾಮು ಸಿಟ್ಟು ಗೊಂಡಿದ್ದ. ಈಗ ಬೇಡ ಕಣೋ, ಶ್ರೀಮತಿ ಯ ಇಷ್ಟದ ರೂಮು ಕಣೋ... ಅದು
ಎಂದಾಗ ಶಿವರಾಮನ ಕೋಪ ಅಲ್ಲೇ ಕರಗಿತ್ತು. ಸರಿ ಏನಾದರೂ ವ್ಯವಸ್ಥೆ ಮಾಡ್ತೀನಿ ಎಂದು ಗೆಳೆಯನಿಗೆ ಸಮಾಧಾನ ಮಾಡಿದ್ದ.
ಶ್ರೀಮತಿ ಯ ನೆನಪು ತನ್ನ ಬಳಿಯೇ ಇರಬೇಕು ಅಲ್ವೇ?
ಲಾಫಿಂಗ್ ಕ್ಲಬ್ ಬಿಟ್ಟರೆ, ಯೋಗ ಹಾಗೂ ವಾಕಿಂಗ್ ಕ್ಲಬ್ ಕೂಡ ಇತ್ತು. ಸಾಲ್ಸಾ ಒಂದು ಬಾಕಿ ತನಗೆ ಎಂದು ರಾಯರು ತನಗೆ ತಾನೇ ಹೇಳಿ ನಗುತ್ತಿದ್ದರು.
ಒಂದು ಸ್ವೆಟರ್ ಸಾಕಾಗ್ತ ಇಲ್ಲ ಈ ಚಳಿಗೆ. ಕೊರೆಯುವ ಚಳಿಗೆ ಎಚ್ಚೆತ್ತ
ರಾಯರು ವಾಸ್ತವಕ್ಕೆ ಬಂದರು. ಏನು ಅನಿಸಿತೋ, ತಮ್ಮ ಪುಟ್ಟ ನೋಕಿಯಾ ಮೊಬೈಲ್ ತೆಗೆದು ಶಿವರಾಮು ಗೆ ಫೋನ್ ಮಾಡಿದರು.
" ಅದೂ ನೀನು ಹೇಳಿದ್ಯಲ್ಲ ಪಾರ್ಟಿ ಇದಾರೆ ಅಂತ, ಅವರು ಈಗ್ಲೂ ನೋಡ್ತಾ ಇದರ ಮನೆ?"
" ಹೌದು ಕಣೋ, ಅವರು ಒಂದೆರಡು ಮನೆ ನೋಡಿದ್ರೂ ಸರಿ ಆಗ್ಲಿಲ್ಲ ಅಂತೆ. ಮನಸ್ಸು ಬದಲಾಯಿಸಿ ಬಿಟ್ಟಿಯ ಹೇಗೆ!"
" ಹೂ, ಹೌದೂ.. ನಾಳೆ ಕರ್ಕೊಂಡು ಬಾ ಅವ್ರನ್ನ "
" ಸರಿ . ಫೋನ್ ಮಾಡ್ತೀನಿ. ಓಕೆ ಅಂದ್ರೆ ನಾಳೇನೇ
ಬರ್ತೀನಿ" ಎಂದು ಶಿವರಾಮು ಕಾಲ್ ಕಟ್ ಮಾಡಿದ್ದ.
ಎರಡನೇ ಮಳೆಗೆ ಆಕಾಶ ಸಜ್ಜಾಗುವ ಹಂತದಲ್ಲಿತ್ತು. ರಾಯರು ಕಾಫಿ ಲೋಟ ಹಿಡಿದುಕೊಂಡು ಮನೆಯೊಳಗೆ ಬಂದರು. ಟಿವಿ ಮೇಲೆ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಶ್ರೀಮತಿ ಯ ಪಟ ಬಹು ದಿನಗಳ ಬಳಿಕ ಹೂ ನಗೆ ಬೀರಿ ದಂತೆ ಅವರಿಗನಿಸಿತು.
Comments
Post a Comment